Saturday 14 February, 2009

winning and Crisis....

World is under economic crisis, it is natural to feel anxious in this economy, especially this young generation, addicted to lavish spending and never ever expected this crisis so nobody is prepared for this, few months back I was dreaming of flying to other country on some assignment but now I am scared of being laid off and thinking how to stay here in Bangalore without packing my luggage to Kottur. Youngsters who are working in Software and finance institutions are worrying not only being unemployed, but also it can down the curtain of love and respect what they enjoyed all these days. Now the relevant question is… do we need to keep on winning to get the Love and respect from someone? how many will show the same love and respect what they showered all these days irrespective of winning and loosing? I don’t know the answers…but if people started thinking winning is everything than they can take wrong path to get into that.
For some, winning is everything. For some everything is winning, even loosing is winning. In this world success has many friends; failure is a bastard. This is most important time for an individual to pause for some time so that he can soar higher. Anyone who loves truly will love for whatever we are but that count will be less and will come into picture when you failed, greatness is not in never falling but rising in every time you fall.
Respect is another illusion, why do we need respect? Yes, everyone wants to be felt great, pampered!!! Doing what you want and being content is extreme happiness.
My friend advice to me is if something gets worse, let’s face the monster. Once defeated, we will be proud of those moments, instead of running away from fear.
- Jagadeesh (Summary of my discussion with my friend Ghouse)

Thursday 12 February, 2009

ಎಲ್ಲೋ... ಯಾವಾಗೋ... ಓದಿದ್ದು...

ಇನ್ನೇನು ನಾಳೆ ಪ್ರೇಮಿಗಳ ದಿನಾಚರಣೆ.. ಶ್ರೀರಾಮಸೇನೆ ಅಬ್ಬರ, ಪ್ರಗತಿಪರರ ಕೂಗಿನ ಮಧ್ಯ ಪ್ರೀತಿ ತನ್ನ ಅಭಿವ್ಯಕ್ತಿ ಮಾಡಿಕೊಳ್ಳುವ ಆತುರದಲ್ಲಿದೆ.. ಪ್ರೀತಿ ಅಂದರೇನು ? ಅಂತ ನಾನು ಯೋಚಿಸುತ್ತಲೇ ಇದ್ದೇನೆ.. ವಿಶಾಲ ಹೃದಯದವನಾದ ನಾನು, ನನ್ನ ಹೃದಯದಲ್ಲೂ ಸಾಕಷ್ಟು ಪ್ರೇಮಿಗಳ ಹೆಸರು ಬರೆದುಕೊಂಡಿದ್ದೇನೆ. ಇಂಥಪ್ಪ ನನ್ನನ್ನು ಪ್ರೀತಿ ಎಂದರೇನು ? ಎಂದು ಯಾರಾದರು ಕೇಳಿದರೆ ಈಗಲೂ ಹೇಳಲು ಕಷ್ಟ ಪಡುತ್ತೇನೆ. ಇಂಥಹ ಸಂದರ್ಭದಲ್ಲೆಲ್ಲಾ ನನ್ನ ನೆರವಿಗೆ ಬರುವುದು ಒಂದು ಕಥೆ ಮಾತ್ರ.. ಪ್ರೀತಿ ಎಂದರೇನು ಎಂದು ಕೇಳಿದರೆ ಈಗಲೂ ನಾನು ಈ ಕಥೆ ಹೇಳುತ್ತೇನೆ. ಈ ಕಥೆ ಎಲ್ಲಿ ಓದಿದೆ ಮತ್ತು ಯಾವಾಗ ಓದಿದೆ ಅನ್ನುವುದು ನೆನಪಾಗುತ್ತಿಲ್ಲ.. ಆದರೆ ಈ ಕಥೆ ನಾನು ಬರೆದದ್ದಂತು ಅಲ್ಲ.. ಇಷ್ಟು ಸ್ಪಷ್ಟನೆ ನಾನು ಕೊಡಬಲ್ಲೆ.. ನೀವು ಒಮ್ಮೆ ಈ ಕಥೆ ಕೇಳಿ..

ಅದೊಂದು ದೊಡ್ಡ ಮರ. ಆ ಮರದ ತುಂಬ ಹಕ್ಕಿಗಳು, ಹೂವುಗಳು, ಹಣ್ಣು-ಹಂಪಲಗಳು ಯಾವಾಗಲು ತುಂಬಿರುತ್ತಿದ್ದವು. ಆಕಾಶದೆತ್ತರಕ್ಕೆ ಬೆಳೆದ ಆ ಮರದ ನೆರಳಲ್ಲಿ ಪುಟ್ಟ ಮಗುವೊಂದು ಆಡಲು ಬರುತ್ತಿತ್ತು. ಆ ಮಗು ಮತ್ತು ಮರದ ನಡುವೆ ಪ್ರೀತಿ ಬೆಳೆದಿತ್ತು. ಮಗು ಆಡಲು ಬಂದರೆ ಮರಕ್ಕೆ ಎಲ್ಲಿಲ್ಲದ ಸಂತಸ. ಅಷ್ಟು ದೊಡ್ಡ ಮರ, ಮಗು ಬರುತ್ತಿದ್ದಂತೆ ಬಾಗಿ ಹಣ್ಣು, ಹೂವು ಎಲ್ಲವನ್ನು ಕೊಡುತ್ತಿತ್ತು.

ಪ್ರೀತಿ ಎಲ್ಲಿ ಇರುತ್ತದೋ ಅಲ್ಲಿ ಬಾಗುವಿಕೆ ಇರುತ್ತದೆ. ಎಲ್ಲಿ ನಾನು ಎನ್ನುವ ಇಗೋ (ಅಹಂಕಾರ) ಇರುತ್ತದೋ ಅಲ್ಲಿ ಇನ್ನೊಬ್ಬರ ಮುಂದೆ ಬಾಗಲು ಸಾಧ್ಯವಾಗುವುದಿಲ್ಲ.

ಆಡಲು ಬಂದ ಮಗು ಎಷ್ಟೋ ಬಾರಿ ಮರದ ಚಿಗುರು, ಮೊಗ್ಗುಗಳನ್ನೆಲ್ಲಾ ಕಿತ್ತುತಿತ್ತು. ಆದರೂ ಮರಕ್ಕೆ ಮಾತ್ರ ದುಃಖ ಆಗುತ್ತಿರಲಿಲ್ಲ. ಏಕೆಂದರೆ ಪ್ರೀತಿಗೆ ಏನನ್ನಾದರೂ ಕೊಡಬೇಕೆಂದರೆ ಎಲ್ಲಿಲ್ಲದ ಹಿಗ್ಗು. ಆದರೆ ಅಹಂಕಾರ ಇದಕ್ಕೆ ವಿರುದ್ದ..

ದಿನಗಳು ಕಳೆದವು. ಮಗು ಸ್ವಲ್ಪ ದೊಡ್ಡದಾಯಿತು. ಈಗ ಮಗು ಶಾಲೆಗೆ ಹೋಗಲಾರಂಭಿಸಿತು. ನಮ್ಮ-ನಿಮ್ಮ ಹಾಗೆ ಅದು ಎಲ್ಲರಿಗಿಂತ ಫರ್ಸ್ಟ್ ಬರಬೇಕು, ಓದಿ ಡಾಕ್ಟರ್, ಇಂಜಿನಿಯರ್ ಆಗಬೇಕು ಎನ್ನುವ ಆಸೆ ಪಟ್ಟಿತು. ಹೀಗಾಗಿ ಮರದ ಹತ್ತಿರ ಬರುವುದನ್ನು ಕಡಿಮೆ ಮಾಡಿತು. ಆದರೆ, ಮರ ಮಾತ್ರ ಮಗುವಿನ ಬರುವಿಕೆಗಾಗಿ ಕಾಯುತ್ತಿತ್ತು. ಮಗು ಒಮ್ಮೆ ಬಂದರೆ ಮತ್ತೆ ಬರಲು ಹಲವು ದಿನಗಳನ್ನೇ ತೆಗೆದುಕೊಳ್ಳುತ್ತಿತ್ತು. ಆದರೂ ಮರ ಮಾತ್ರ ಯಾವುದೇ ಬೇಸರವಿಲ್ಲದೆ ಮಗುವಿಗಾಗಿ ಕಾಯುತ್ತಿತ್ತು.

ಏಕೆಂದರೆ ಪ್ರೀತಿ ಕಾಯುತ್ತದೆ. ಕಾಯಿಸುವುದಿಲ್ಲ. ಕಾಯುವುದರಲ್ಲೇ ಅದು ಸಂತಸ ಪಡುತ್ತದೆ.

ಮಗು ಈಗ ಯುವಕನಾದ. ಎಲ್ಲರಿಗಿಂತ ಫರ್ಸ್ಟ್ ಬರಬೇಕು, ಎಲ್ಲರಿಗಿಂತ ಮೇಲೆ ಬರಬೇಕು ಎನ್ನುವ ಆಕಾಂಕ್ಷೆಗಳು ಇನ್ನಷ್ಟು ಹೆಚ್ಚಾದವು. ಈಗಂತೂ ಮರದ ಹತ್ತಿರ ಬರುವುದನ್ನೇ ಬಿಟ್ಟಿದ್ದ.. ಆತನಲ್ಲಿನ ಅಹಂಕಾರ ಜಾಸ್ತಿ ಆಗುತ್ತಲೇ ಹೋಯಿತು.

ಪ್ರೀತಿ ಎಲ್ಲರಲ್ಲೂ ಬೆರೆಯಲು ಬಯಸುತ್ತದೆ. ಅಹಂಕಾರ ಮಾತ್ರ ಯಾರೊಂದಿಗೂ ಬೆರೆಯುವುದಿಲ್ಲ. ಅದು ಎಲ್ಲರು ತನ್ನ ಬಳಿಯೇ ಬರಲಿ ಎಂದು ಬಯಸುತ್ತದೆ.

ಒಂದು ದಿನ ಆ ಯುವಕ ಮರದ ಮುಂದೆ ಹೋಗುತ್ತಿದ್ದ.. ಆದರೂ ಮರವನ್ನೇ ನೋಡಲಿಲ್ಲ.. ಏಕೆಂದರೆ ಆ ಮರದ ಬಳಿ ಈಗ ಆತನ ಕೆಲಸವೇ ಇರಲಿಲ್ಲ. ಮರವೇ ಯುವಕನನ್ನು ಮಾತನಾಡಿಸಿತು. "ಯಾಕೆ ಈಗೀಗ ನನ್ನ ಬಳಿ ಬರುತ್ತಿಲ್ಲ " ಎಂದು ಪ್ರಶ್ನೆ ಮಾಡಿತು. ಯುವಕ ಸಿಟ್ಟಿನಿಂದಲೇ ಉತ್ತರ ಕೊಟ್ಟ. "ನಿನ್ನ ಬಳಿ ಏನಿದೆ ಅಂತ ಬರಲಿ. ನನ್ನ ಕಷ್ಟಗಳನ್ನು ನೀನು ಪರಿಹರಿಸ ಬಲ್ಲೆ ಏನು ?" ಎಂದು ಪ್ರಶ್ನಿಸಿದ.. ಯುವಕನ ಮಾತಿಗೆ ಮರ ನಕ್ಕು ಬಿಟ್ಟಿತು. ನಿನಗೆ ಏನು ಬೇಕು ಕೇಳು.. ನನ್ನಲ್ಲಿರುವುದೆಲ್ಲ ನಿನಗೆ ಕೊಡುತ್ತೇನೆ. ಎಂದಿತು. ನಿನ್ನ ಕಷ್ಟ ಪರಿಹರಿಸಲು ನನ್ನಿಂದಾದ ಸಹಾಯ ಮಾಡುವೆ ಎಂದು ಹೇಳಿತು.

ಪ್ರೀತಿ ಮಾತ್ರ ತನ್ನಲ್ಲಿ ಇರುವುದೆಲ್ಲವನ್ನು ಕೊಡಬಲ್ಲದು. ಯಾರು ಪ್ರೇಮಿಗಾಗಿ ಎಲ್ಲವನ್ನೂ ಧಾರೆ ಎರೆಯ ಬಲ್ಲರೋ ಅವರು ಮಾತ್ರ ಪ್ರೀತಿ ಎಂದರೇನು ಅಂಥ ಅರ್ಥ ಮಾಡಿಕೊಳ್ಳಬಲ್ಲರು. ಯಾರು ಮತ್ತೊಬ್ಬರಿಂದ ಪಡೆಯಲು ಬಯಸುವರೋ ಅವರು ಪ್ರೇಮದ ಮೊದಲ ಅಕ್ಷರ ಕೂಡ ಅರಿಯಲಾರರು.

ಇಂತಹದೊಂದು ಅವಕಾಶಕ್ಕಾಗಿ ಕಾಯುತ್ತಿದ್ದ ಯುವಕ ತನ್ನ ಕಷ್ಟಗಳನ್ನು ಹೇಳಿಕೊಳ್ಳಲು ಆರಂಭಿಸಿದ. "ನಾನು ನಿನ್ನ ಬಳಿ ಬರಬೇಕೆಂದರೆ ನನಗೆ ಹಣ ಬೇಕು. ಅದನ್ನು ನೀನು ಹೊಂದಿಸು" ಎಂದು ಕೇಳಿದ ಯವಕನ ಮಾತು ಕೇಳಿದ ಮರ ನಗಲಾರಂಭಿಸಿತು. ತಕ್ಷಣವೇ ಅದು ಆ ಯುವಕನಿಗೆ ಒಂದು ಮಾತು ಹೇಳಿತು. "ನೋಡು ನೀನು ಈ ಕೂಡಲೇ ನನ್ನ ಕೊಂಬೆಗಳಲ್ಲಿ ಇರುವ ಹಣ್ಣುಗಳನ್ನೆಲ್ಲ ಕಿತ್ತು ಪೇಟೆಯಲ್ಲಿ ಮಾರಿ ಹಣ ತೆಗೆದುಕೋ ಎಂದು ಹೇಳಿತು" ಕೂಡಲೇ ಆ ಯುವಕ ಬೇರೊಂದು ಯೋಚಿಸದೆ ಮರದ ಹಣ್ಣುಗಳನ್ನೆಲ್ಲ ಕಿತ್ತು ತೆಗೆದುಕೊಂಡು ಸಂತಸದಿಂದ ಹೋದ.. ಮರಕ್ಕೆ ಒಂದು ಥ್ಯಾಂಕ್ಸ್ ಕೂಡ ಹೇಳಲಿಲ್ಲ. ಮರ ಕೂಡ ಥ್ಯಾಂಕ್ಸ್ ಬಯಸಲಿಲ್ಲ.

ಪ್ರೀತಿ ತನ್ನಲ್ಲಿರುವುದನ್ನು ಕೊಡಲು ಸಂತಸ ಪಡುತ್ತದೆ. ಪ್ರೇಮಿಯ ದುಃಖವೆ ತನ್ನ ದುಃಖ ಎಂದು ಭಾವಿಸುತ್ತದೆ. ತನ್ನಲ್ಲಿ ಇರುವುದನ್ನು ಪ್ರೇಮಿಗೆ ಕೊಟ್ಟಾಗಲೇ ಪ್ರೀತಿಗೆ ಸಂತಸ. ಮತ್ತು ಯಾವುದೇ ಪ್ರತಿಫಲಾಪೆಕ್ಷೆಯನ್ನು ಪ್ರೀತಿ ಬಯಸುವುದಿಲ್ಲ.

ಹಣ ಪಡೆದು ಹೋದ ಯುವಕ ಮತ್ತೆ ಬಹುದಿನಗಳ ತನಕ ಇತ್ತ ಕಡೆ ಸುಳಿಯಲಿಲ್ಲ. ಆತ ಮರವನ್ನೇ ಮರೆತು ಬಿಟ್ಟಿದ್ದ. ಯುವಕನಿಗೆ ದುಡ್ದು ಗಳಿಸುವುದೇ ಸಂತಸವಾಗಿತ್ತು. ಆದರೆ ಮರ ಮಾತ್ರ ಆತನ ಬರುವಿಕೆಗಾಗಿ ಕಾಯುತ್ತಿತ್ತು. ಮರ ಮಾತ್ರ ಆ ಯುವಕನನ್ನು ದಿನವೂ ನೆನಪು ಮಾಡಿಕೊಳ್ಳುತ್ತಿತ್ತು.

ಪ್ರೀತಿ ಇರುವಲ್ಲಿ ನೆನಪು ಇರುತ್ತದೆ. ಎಲ್ಲಿ ಪ್ರೀತಿ ಇರುವುದಿಲ್ಲವೋ ಅಲ್ಲಿ ಮರೆವು ಕೆಲಸ ಮಾಡುತ್ತದೆ. ಮರೆವು ಇರುವಲ್ಲಿ ಬಾಂದವ್ಯಕ್ಕೆ ಅರ್ಥವೇ ಇರುವುದಿಲ್ಲ.

ಹೀಗೆ ಅದೆಷ್ಟೋ ವರ್ಷಗಳು ಉರುಳಿದವು. ಈಗ ಆ ಯುವಕ ಯಜಮಾನನಾಗಿದ್ದ. ಅಕಸ್ಮಾತ್ತಾಗಿ ಆ ಯಜಮಾನ ಮತ್ತೆ ಆ ಮರದ ಹತ್ತಿರ ಬಂದ.. ಆಗಲೂ ಮರ ಆತನನ್ನು ನೋಡಿ ಮಾತನಾಡಿಸಿತು. ಕುಶಲ ಕೇಳಿತು. ಆ ಯಜಮಾನ ಮರದ ಮಾತಿಗೆ ನಕ್ಕು ಬಿಟ್ಟ. ಇಂಥಹ ಹುಡುಗಾಟಿಕೆ ಎಲ್ಲ ಬಿಟ್ಟುಬಿಡು ಅಂದು ಮರಕ್ಕೆ ಸಲಹೆ ಮಾಡಿದ. ಇವೆಲ್ಲ ಕೆಲಸಕ್ಕೆ ಬಾರದ ಮಾತುಗಳು ಎಂದು ಹೇಳಿದ.

ಯಾರಲ್ಲಿ ಪ್ರೀತಿ ಇರುವುದಿಲ್ಲವೋ ಅವರಿಗೆ ಮರದ ಮಾತುಗಳು ಹುಚ್ಚಾಟ ಎನಿಸಿಬಿಡುತ್ತದೆ. ಪ್ರೀತಿ ಇರುವಲ್ಲಿ ಇದು ಹುಡುಗಾಟಿಕೆ ಅಲ್ಲ ಎನ್ನುವ ಅರಿವು ಮೂಡುವುದು.

ಈಗ ಆ ಯಜಮಾನನಿಗೆ ಮನೆ ಕಟ್ಟುವ ಆಸೆ ಆಗಿತ್ತು.. ಅದಕ್ಕಾಗಿ ಆತ ಆ ಮರದ ಬಳಿ ಬಂದಿದ್ದ.. ಮರದೊಂದಿಗೆ ಮಾತನಾಡುತ್ತಲೇ ಆತ ತನ್ನ ಮನೆ ಕಟ್ಟುವ ಇಂಗಿತ ವ್ಯಕ್ತಪಡಿಸಿದ. ಮರಕ್ಕೆ ಅರ್ಥವಾಯಿತು. ಅದು ಕೂಡಲೇ ನೋಡು ನೀನು ನನ್ನ ರೆಂಬೆ-ಕೊಂಬೆಗಳನ್ನೆಲ್ಲ ಕಡಿದುಕೊಂಡು ಹೋಗಿ ಮನೆ ಕಟ್ಟಿಕೊಳ್ಳಬಹುದು ಎಂದು ಹೇಳಿತು. ತಕ್ಷಣವೇ ಮರದ ಕೊಂಬೆಗಳನ್ನೆಲ್ಲ ಆ ಯಜಮಾನ ಕಡಿದ. ಅದರೂ ಮರಕ್ಕೆ ಸಂತಸವೇ.

ಪ್ರೀತಿಗೆ ಪ್ರೇಮಿಯ ಸಂತಸವೇ ಹೆಚ್ಚು. ಅದು ತನ್ನ ದುಃಖದಲ್ಲೂ ಪ್ರೇಮಿಯ ಸಂತಸ ಬಯಸುತ್ತದೆ. ತನ್ನ ಅಳುವಿನಲ್ಲೂ ಪ್ರೇಮಿಯ ನಗು ಬಯಸುತ್ತದೆ.

ಈಗ ಆ ಮರ ಬರಿದಾಯಿತು. ಮರದ ಬಳಿ ಈಗ ಮೊದಲಿನ ಹಾಗೆ ಹಕ್ಕಿಗಳು ಬರುತ್ತಿಲ್ಲ. ಗಾಳಿ ಬೀಸುತ್ತಿಲ್ಲ. ಬರಿದೆ ಬೊಡ್ಡೆ ಮಾತ್ರ ಉಳಿದಿತ್ತು. ಅದಕ್ಕೀಗ ನೆನಪು ಮಾತ್ರ ಸಂಗಾತಿಯಾಗಿತ್ತು. ಒಂದು ಎಲೆ ಕೂಡ ಅದರಲ್ಲಿ ಬೆಳೆಯದ ಸ್ಥಿತಿ ಏರ್ಪಟ್ಟಿತ್ತು.

ಮತ್ತೆ ಅದೆಷ್ಟೋ ವರ್ಷಗಳು ಉರುಳಿದವು. ಈಗ ಆ ಯಜಮಾನ ಮುದುಕನಗಿದ್ದ. ಬದುಕು ಆತನಿಗೆ ಸಾಕೆನಿಸಿತ್ತು. ಎಲ್ಲಾದರೂ ದೂರ ಹೋಗಿ ಬದುಕಬೇಕು ಎನಿಸಿತ್ತು. ಮರದ ಬಳಿ ಬಂದು ನಡುಗುತ್ತಲೇ ಕೇಳಿದ.. "ನೋಡು ನಾನು ಮನಶ್ಯಾಂತಿ ಪಡೆಯಲು ದೂರದ ದೇಶಕ್ಕೆ ಹೋಗಬೇಕು. ಈ ನದಿ ದಾಟಿ ಎಲ್ಲಾದರೂ ಹೋಗಿ ಬದುಕಬೇಕು ನನಗೆ ಏನಾದರು ಸಹಾಯ ಮಾಡು" ಎಂದ.. ಅದಕ್ಕೆ ಮರ ಹೇಳಿತು, "ನನ್ನಲ್ಲಿ ಉಳಿದಿರುವುದು ಈ ಕಾಂಡ ಭಾಗ ಮಾತ್ರ.. ಇದನ್ನೇ ಕಡಿದು ನೀನು ದೋಣಿ ಮಾಡಿಕೊಂಡು ಹೋದರೆ ನನ್ನ ಜನ್ಮ ಸಾರ್ಥಕವಾಗುತ್ತದೆ" ಎಂದು ಪ್ರತಿಕ್ರಿಯಿಸಿತು. ಕೂಡಲೇ ಮರದ ಬೇರು ಸಮೇತ ಕಿತ್ತ ಮುದುಕ ದೋಣಿ ಮಾಡಿಕೊಂಡು ಹೋಗಿಬಿಟ್ಟ. ಒಂದಾನೊಂದು ಕಾಲದಲ್ಲಿ ದೊಡ್ಡ ಮರವಿದ್ದ ಸ್ಥಳದಲ್ಲಿ ಈಗ ಏನು ಕಾಣುತ್ತಿಲ್ಲ. ಬೇರು ಸಮೇತ ಕಿತ್ತು ಹೋದ ಮರದ ಅಲ್ಪ-ಸ್ವಲ್ಪ ತುಂಡುಗಳು ಮಾತ್ರ ಅದಕ್ಕೆ ಸಾಕ್ಷಿ ಆಗಿದ್ದವು.

ಪ್ರೀತಿ ತನ್ನ ಸಾವಿನಲ್ಲೂ ಪ್ರೇಮಿಯ ಬದುಕಿನ ಬಗ್ಗೆ ಕಾಳಜಿ ವಹಿಸುತ್ತದೆ. ಪ್ರೇಮಿಗೆ ನೆರವಾಗುವುದಕ್ಕಿಂತ ಹೆಚ್ಚಿನ ಭಾಗ್ಯ ಇನ್ನೇನಿದೆ ಎಂದು ಪ್ರೀತಿ ಭಾವಿಸುತ್ತದೆ. ಯಾರಿಗೆ ಇಂಥ ಪ್ರೀತಿ ಅರ್ಥವಾಗುವುದಿಲ್ಲವೋ ಅವರಿಗೆ ಜಗತ್ತಿನ ಬಗ್ಗೆ ನಂಬಿಕೆಯೇ ಹುಟ್ಟುವುದಿಲ್ಲ.. ಅಂತವರು ಬರಿದೆ ವಂಚನೆಯಲ್ಲಿ ತೊಡಗುತ್ತಾರೆ.

ಕಥೆ ಇಲ್ಲಿಗೆ ಮುಗಿಯಲಿಲ್ಲ.

ನಾನೊಮ್ಮೆ ಆ ಮರದ ಅವಶೇಷಗಳ ಬಳಿಗೆ ಅಡ್ಡಾಡುತ್ತ ಹೋಗಿದ್ದೆ. ಆ ಮರದ ಚಿಕ್ಕ ತುಂಡು ನನ್ನನ್ನು ಮಾತಾದಿಸಿತು. ಇನ್ನೆಂದು ಹಸಿರಾಗಲು ಸಾಧ್ಯವಾಗದೆ ಜೀವ ಬಿಡುತ್ತಿರುವ ಆ ತುಂಡು ನನಿಗೆ ದೈನ್ಯದಿಂದ ಕೇಳಿತು. "ನೋಡಿ ನನ್ನ ಜೀವ ಹೋಗುತ್ತಿದೆ. ನನ್ನ ಕೊನೆಯ ಆಸೆ ಎಂದರೆ ನನ್ನ ಪ್ರೇಮಿ ನದಿಯಲ್ಲಿ ಪ್ರಯಾಣ ಹೋಗಿದ್ದಾನೆ. ಆತ ಸುರಕ್ಷಿತವಾಗಿ ತಲುಪಿದ ಬಗ್ಗೆ ನನಗೆ ಆತಂಕವಾಗಿದೆ. ಆತನು ಸುರಕ್ಷಿತವಾಗಿ ಇರುವ ಬಗ್ಗೆ ನನಗೆ ಮಾಹಿತಿ ನೀಡಲು ಸಾದ್ಯವೇ ?." ಎಂದು ಪ್ರಶ್ನಿಸಿತು.

ಪ್ರೀತಿಗೆ ಒಳಗಾದವನ ಪ್ರತಿ ಕಣದಲ್ಲೂ ಅದು ಪ್ರಜ್ವಲಿಸುತ್ತದೆ. ಪ್ರೀತಿಗೆ ಕೊಡುವುದಷ್ಟೇ ಗೊತ್ತು. ಬೇಡುವುದು ಗೊತ್ತಿಲ್ಲ.

ಪ್ರೀತಿ ಎಂದರೇನು ಎಂದು ಯಾರಾದರು ಕೇಳಿದರೆ ನಾನು ಈ ಕಥೆ ಹೇಳುತ್ತೇನೆ... ಪ್ರೀತಿ ಎಂದರೆ ಕಾಯುವುದಾ ? ಎಲ್ಲವನ್ನು ಕೊಡುವುದಾ ? ತನ್ನ ಅಳುವಿನಲ್ಲೂ ಪ್ರೇಮಿಯ ನಗು ಬಯಸುವುದಾ ? ಸಾಯುವ ಕೊನೆ ಕ್ಷಣದಲ್ಲೂ ಪ್ರೇಮಿಯ ಬದುಕಿನ ಬಗ್ಗೆ ಕಾಳಜಿವಹಿಸುವುದಾ ? ಗೊತ್ತಿಲ್ಲ ನಾನು ಈ ಕಥೆ ಹೇಳುತ್ತೇನೆ.

Sunday 8 February, 2009

ಕೊಟ್ಟೂರು ದೊರೆಯೇ... ನಿನಗಾರು ಸರಿಯೇ...

ಇದೆ ೧೯ ರಂದು ಕೊಟ್ಟೂರು ಜಾತ್ರೆ.ನಾನು ಚಿಕ್ಕವನಿದ್ದಾಗಿನಿಂದಲೂ ಈ ಜಾತ್ರೆ ಬಗ್ಗೆ ವಿಶಿಷ್ಟ ಕುತೂಹಲ ಮತ್ತು ಬೆರಗು ನನ್ನ ಕಾಡುತ್ತಲೇ ಇದೆ.ನನಗಿನ್ನೂ ಚೆನ್ನಾಗಿ ನೆನಪಿದೆ.ಜಾತ್ರೆ ಬಂತೆಂದರೆ ನಮ್ಮ ಮನೆಗೆ ಬರುತ್ತಿದ್ದ ನೆಂಟರು,ಯಾವುದೊ ಊರಿನ ಪರಿಚಯಸ್ತರು,ಸ್ನೇಹಿತರು,ಹೀಗೆ ಎಲ್ಲರು ಸೇರಿ ಚಿಕ್ಕ ಮನೆಯಲ್ಲೊಂದು ಸಂತೆಯೇ ಏರ್ಪಡುತ್ತಿತ್ತು.ರಥೋತ್ಸವ ದಿನ ಮನೆಯ ಮುಂದಿನ ರಸ್ತೆ ಸಾವಿರಾರು ಜನರ ಓಡಾಟದಿಂದಾಗಿ ವಿಶಿಷ್ಟವಾಗಿ ಕಂಗೊಳಿಸುತ್ತಿತ್ತು.ಜಾತ್ರೆಗೆ ಬನ್ನಿ ಅಂಥ ಅಹ್ವಾನ ನೀಡದಿದ್ದರೂ ಆ ದಿನ ಸರಿಯಾಗಿ ಲಕ್ಷಾಂತರ ಜನ ಬಂದು ಸೇರುತಿದ್ದರು ಮತ್ತು ಈಗಲೂ ಸೇರುತ್ತಾರೆ.ರಾಜಕಾರಣಿಗಳ ಸಭೆಗೆ ಕರೆತರುವ ಹಾಗೆ ಹಳ್ಳಿ ಹಳ್ಳಿಗೆ ಲಾರಿ ಕಳಿಸುವುದಿಲ್ಲ.ಅಥವಾ ದುಡ್ಡು ಕೊಡುವುದಿಲ್ಲ ಅದರೂ ಇವರನ್ನೆಲ್ಲಾ ಒಂದು ಗೂಡಿಸುವ ಕೊಟ್ಟೂರೇಶ್ವರನ ಶಕ್ತಿ ಬಗ್ಗೆ ನನಗೆ ವಿಚಿತ್ರ ಆಸಕ್ತಿ.
ನೂರಾರು ವರ್ಷಗಳಿಂದ ನಮ್ಮೂರ ಸುತ್ತಮುತ್ತಲಿನ ಲಕ್ಷಾಂತರ ಜನರ ಬದುಕಿನ ಕಷ್ಟ ಸುಖದಲ್ಲಿ ಕೊಟ್ಟೂರೇಶ್ವರ ಭಾಗಿಯಾಗಿದ್ದಾನೆ.ತಮ್ಮೆಲ್ಲ ನೋವು-ನಲಿವುಗಳನ್ನು ಈ ಜನರು ಕೊಟ್ಟೂರೇಶ್ವರನೊಂದಿಗೆ ಹಂಚಿಕೊಂಡಿದ್ದಾರೆ.ಕೊಟ್ಟೂರೇಶ್ವರ ಮಾತ್ರವಲ್ಲ,ಈ ರೀತಿಯಲ್ಲಿ ಕರ್ನಾಟಕದ ಉದ್ದಕ್ಕೂ ನೂರಾರು ದೈವಗಳಿವೆ.ಕೊಟ್ಯಂತರ ಜನರು ತಾವು ನಂಬಿದ ಜನರೊಂದಿಗೆ ಇಂತಹುದೇ ಸಂಬಂಧ ಹೊಂದಿದ್ದಾರೆ.ನಾಯಕನಹಟ್ಟಿ ತಿಪ್ಪೇಸ್ವಾಮಿ,ಮೈಲಾರ ಲಿಂಗಪ್ಪ,ಕೂಲಹಳ್ಳಿ ಗೋಣಿ ಬಸವ,ಸವದತ್ತಿ ಎಲ್ಲಮ್ಮ,ಗುಲ್ಬರ್ಗದ ಶರಣ ಬಸಪ್ಪಅಪ್ಪ,ಗದುಗಿನ ತೊಂಟದರ್ಯ,ದಕ್ಷಿಣ ಕರ್ನಾಟಕದಲ್ಲಿ ಮಲೆಮಹದೇಶ್ವರ,ಚಿಕ್ಕಲೂರಿನ ಮಂಟೇಸ್ವಾಮಿ,ಮುಂತಾದ ಜಾತ್ರೆಗಳೇ ಇದಕ್ಕೆ ಸಾಕ್ಷಿ.ಕರ್ನಾಟಕದ ಚರಿತ್ರೆ ಎಂದು ನಾವು ಓದುವ ಪುಸ್ತಕಗಳಲ್ಲಿ ಈ ದೈವಗಳ ಬಗ್ಗೆ ಉಲ್ಲೇಖವೇ ಇಲ್ಲ (ನಮ್ಮ ಚರಿತ್ರೆ ಪುಸ್ತಕಗಳು ಒಳಗೊಂಡಿರುವ ವಿಷಯ ಕುರಿತು ಮತ್ತೆ ಬರೆಯುವೆ.)
ಆರಂಭದಲ್ಲಿ ಹುಚ್ಚನ ಹಾಗೆ ಗತಿ ಇಲ್ಲದವನ ರೀತಿಯಲ್ಲಿ ಎಂಟ್ರಿಯಾಗಿದ್ದ ಕೊಟ್ಟೂರೇಶ್ವರ (ಈಗಲೂ ಜನ ಹುಚ್ಚ ಕೊಟ್ರಯ್ಯ ಅಂಥ ಕರೆಯುವುದು ರೂಢಿಯಲ್ಲಿದೆ)ಈಗ ಪಡೆದುಕೊಂಡ ರೂಪಾಂತರ ಮಾತ್ರ ವಿಶಿಷ್ಟವಾದುದು.ಕೊಟ್ಟೂರೇಶ್ವರನಿಗೆ ಈಗ ಬೆಳ್ಳಿ ರಥ ಇದೆ.ಬಂಗಾರದ ಒಡವೆಗಳಿವೆ.ವಜ್ರ ಕೂಡ ಇದೆ.ದೇವಾಲಯಕ್ಕೆ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿದೆ.ಇಂತಹ ವಿರುದ್ದಾತ್ಮಕ ಚಲನೆಗೆ ಕಾರಣ ಏನು? ಇದು ಅರ್ಥವಾದರೆ, ನನ್ನ ಸುತ್ತಲಿನ ಜನರ ಬದುಕು ಅರ್ಥವಾದಂತೆ ಸರಿ.
ಕೊಟ್ಟೂರು ಜಾತ್ರೆ ಬಂತೆಂದರೆ ವಿವಿಧ ಜಾತಿಯ ಜನರು ಒಂದೊಂದು ಕರ್ತವ್ಯ ನಿರ್ವಹಿಸುತ್ತಾರೆ. ಅಗಸರು ಮಡಿ ಬಟ್ಟೆ ಹಾಸುವ ಕೆಲಸ ಮಾಡಿದರೆ, ಮೆದಾರರು ತೇರಿನ ಮೇಲ್ಬಾಗದ ಜಲ್ಲಿ ಕಟ್ಟುವ ಕೆಲಸ ಮಾಡುತ್ತಾರೆ. ಹಾಗೆಯೆ ದಲಿತರು ರಥದ ಚಕ್ರಕ್ಕೆ ಎಣ್ಣೆ ಹಾಕುತ್ತಾರೆ.ಮೇಳದವರು ಉತ್ಸವದ ಮುಂದೆ ಮೇಳ ಮಾಡುತ್ತಾರೆ.ಜಂಗಮರು ಪೂಜೆ ಮಾಡುತ್ತಾರೆ.ಹೀಗೆ ಕುಲೇಳು ಹದಿನೆಂಟು ಜಾತಿಗಳು ಒಂದೊಂದು ಕಾರ್ಯ ಮಾಡುತ್ತವೆ. ಇದು ನೂರಾರು ವರ್ಷಗಳಿಂದಲೂ ಇದೆ.ಈ ಕರ್ತವ್ಯಗಳನ್ನೆಲ್ಲ ಕೊಟ್ಟೂರೇಶ್ವರ ನಿಯೋಜಿಸಿದ್ದು ಎನ್ನಲಾಗುತ್ತದೆ.ಹೀಗೆ ಎಲ್ಲ ಜಾತಿಗಳಿಗೂ ಕೊಟ್ಟೂರೇಶ್ವರ ವಿವಿಧ ಕೆಲಸ ಮಾಡಲು ಹೇಳಿದ್ದು ಏಕೆ? ಮತ್ತೊಂದು ಮುಖ್ಯ ವಿಷಯವೆಂದರೆ ಕೊಟ್ಟೂರೇಶ್ವರ ಕೊಟ್ಟೂರಿಗೆ ಬರುವಾಗ ದಲಿತರ ಮನೆಯಲ್ಲಿ ಊಟ ಮಾಡಿದ ಎಂದು ಜನಪದ ಕಾವ್ಯಗಳು ಉಲ್ಲೇಖಿಸುತ್ತವೆ.ಈಗಲೂ ರಥೋತ್ಸವದ ವೇಳೆ ದಲಿತರ ಮನೆಯಿಂದ ಪ್ರಸಾದ ಬಂದ ನಂತರವೇ ತೇರು ಹೊರಡುತ್ತದೆ.ವಿವಿಧ ವರ್ಗಗಳನ್ನು ಒಂದು ಗೂಡಿಸುವ ಪ್ರಯತ್ನದ ಭಾಗವಾಗಿ ಮಾತ್ರ ಇದನ್ನು ಗ್ರಹಿಸಬೇಕಿಲ್ಲ.ಇದಕ್ಕಿರುವ ಐತಿಹಾಸಿಕ ಕಾರಣಗಳೇನು? ಹಾಗು ಸದ್ಯಕ್ಕೆ ಆಗಿರುವ ಬದಲಾವಣೆಗಳು ಏನು ಎನ್ನವುದು ಮುಖ್ಯ.
ಕೊಟ್ಟೂರೇಶ್ವರನ ಕಾಲ ೧೬ನೆ ಶತಮಾನದ ಆರಂಭ (ಸುಮಾರು ೧೫೮೦).ವಿಜಯನಗರ ಸಾಮ್ರಾಜ್ಯ ಪತನವಾಗಿ (೧೫೬೫)ಎಲೆಲ್ಲೂ ಅರಾಜಕತೆ ಮನೆ ಮಾಡಿತ್ತು.ಯುದ್ಧಗಳು ದಿನನಿತ್ಯದ ಬದುಕಿನ ಭಾಗಗಳಗಿದ್ದವು.ಕೊಟ್ಟೂರು ಸುತ್ತಮುತ್ತಲಿನ ಹಲವಾರು ಪಾಳೆಗಾರರು ಅಧಿಕಾರಕ್ಕಾಗಿ ನಿರಂತರವಾಗಿ ಸಂಘರ್ಷ ಮಾಡುತ್ತಿದ್ದರು.ಕೊಟ್ಟೂರು ಸುತ್ತಮುತ್ತಲಿನ ಹರಪನಹಳ್ಳಿ,ಗುಡೆಕೋಟೆ, ಚಿತ್ರದುರ್ಗ, ಜರಿಮಲೆ, ನಾಯಕನಹಟ್ಟಿ ಸೇರಿದಂತೆ ಹಲವಾರು ಪಾಳೆಗಾರರು ಅಧಿಕಾರಕ್ಕಾಗಿ ಕಿತ್ತಾಟದಲ್ಲಿ ತೊಡಗಿದ್ದರು.ಹೀಗೆ ನಡೆಯುತ್ತಿದ್ದ ಕಲಹದಲ್ಲಿ ಸೋತವರ ಪ್ರಾಂತ್ಯಗಳನ್ನು ಕೊಳ್ಳೆ ಹೊಡೆಯುತ್ತಿದ್ದರು.ಇವರ ಸಂಘರ್ಷಕ್ಕೂ ನಮ್ಮೂರ ಜಾತ್ರೆಗೂ ಎಲ್ಲಿಲ್ಲದ ಸಂಬಂಧ.
ಕೊಟ್ಟೂರೇಶ್ವರ ತಾನು ಬದುಕಿರುವಾಗಲೇ ಜಾತ್ರೆಗೆ ಕಡ್ಡಾಯವಾಗಿ ಬಂದು ಇಂತಿಂಥ ಕಾರ್ಯ ನಿರ್ವಹಿಸಬೇಕೆಂದು ವಿವಿಧ ವರ್ಗಗಳಿಗೆ ಸೂಚನೆ ನೀಡುತ್ತಾನೆ.ತನ್ನ ರಥೋತ್ಸವಕ್ಕೆ ತಾನೆ ಲಕ್ಷಾಂತರ ಜನ ಸೇರಿಸಲು ಬಯಸುತ್ತಾನೆ.ಹೀಗೆಂದು ಕೊಟ್ಟೂರೇಶ್ವರನ ಬಗ್ಗೆ ಇರುವ ಕಥೆಗಳು, ಹಾಡುಗಳು ಹೇಳುತ್ತವೆ. ಆಸೆ-ಆಕಾಂಕ್ಷೆ ತ್ಯಜಿಸಿದ ವಿರಾಗಿಯೊಬ್ಬ ಜಾತ್ರೆಯ ವೈಭವ ಯಾಕೆ ಬಯಸುತ್ತಾನೆ ಅನ್ನುವುದು ಮುಖ್ಯ.ನಮ್ಮ ಸುತ್ತಲಿನ ನೂರಾರು ದೈವಗಳ ಕುರಿತು ಈ ರೀತಿಯ ಕಥೆಗಳಿವೆ.
ಜಾತ್ರೆಗಳು ತನ್ನ ಬೆಂಬಲಿಗರ ಶಕ್ತಿಯ ಪ್ರದರ್ಶನ ಮಾಡಲು ಸಂತನಿಗೆ ಉತ್ತಮ ವೇದಿಕೆಯಾಗಿತ್ತು.ಈ ಮೂಲಕ ರಾಜಕೀಯ ಕಚ್ಚಾಟದಲ್ಲಿ ನಿರತವಾಗಿದ್ದ ಪಾಳೆಗಾರರಿಗೆ ಸಂತ ತನ್ನದೇ ಅದ ಸಂದೇಶ ಕಳಿಸುತ್ತಿದ್ದನು.ನಿಮ್ಮ ಕಿತ್ತಾಟಗಳು, ದ್ವೇಷಗಳು ನನ್ನ ಅಸ್ತಿತ್ವಕ್ಕೆ ಧಕ್ಕೆ ತರದಿರಲಿ.ಇದಕ್ಕೆ ವಿರುದ್ದವಾಗಿ ನೀವು ದೇವಾಲಯ ಇಲ್ಲವೇ ದೇವಾಲಯದ ಸಂಪತ್ತಿನ ಮೇಲೆ ಅಧಿಕಾರ ಸ್ಥಾಪಿಸಲು ಯತ್ನಿಸಿದರೆ ನನ್ನ ಲಕ್ಷಾಂತರ ಭಕ್ತರ ಅಕ್ರೋಶ ಎದುರಿಸಬೇಕಾಗುತ್ತದೆ ಎಂದು ಸಂತ ರಾಜಕೀಯ ನಾಯಕರಿಗೆ ಪರೋಕ್ಷವಾಗಿ ಎಚ್ಚರಿಸುತ್ತಿದ್ದ. ಮತ್ತು ಈ ಸಂತನ ಪ್ರೀತಿಗೆ ಪಾತ್ರರಾಗುವುದೆಂದರೆ ಆತನ ಭಕ್ತರ ಒಲುಮೆ ಪಡೆದಂತೆ ಎನ್ನುವುದು ರಾಜಕೀಯ ನಾಯಕರಿಗೂ ಬಹುಬೇಗನೆ ಅರ್ಥವಾಗುತ್ತಿತ್ತು. ಹಾಗಾಗಿ ತಮ್ಮ ನಡುವಿನ ದ್ವೇಷಗಳ ನಡುವೆಯೇ ಈ ಧಾರ್ಮಿಕ ನಾಯಕನಿಗೆ ಪಾಳೆಗಾರರು ಸಲಾಂ ಹೊಡೆಯುತ್ತಿದ್ದರು.ಚಿತ್ರದುರ್ಗ ಹಾಗು ಹರಪನಹಳ್ಳಿ ಪಾಳೆಗಾರರು ಪರಸ್ಪರ ವೈರಿಗಳು. ಆದರೆ, ಕೊಟ್ಟೂರೆಶ್ವರ ಮಠಕ್ಕೆ ಈ ಮನೆತನಗಳು ಭೂಮಿ ದಾನ ನೀಡಿವೆ. ಹೀಗೆ ದಾನ ನೀಡುವ ಮೂಲಕ ಕೊಟ್ಟೂರೇಶ್ವರನ ಲಕ್ಷಾಂತರ ಭಕ್ತರನ್ನು ಒಲಿಸಿಕೊಳ್ಳಲು ಯತ್ನಿಸಿವೆ.ಹಾಗಾಗಿ ಕರ್ನಾಟಕದ ನೂರಾರು ದೇವಾಲಯಗಳಿಗೆ ದಾನ ನೀಡುವುದನ್ನು ನಾವು ಬರಿಯ ಭಕ್ತಿಯ ಸಂಕೇತವಾಗಿ ಮಾತ್ರ ಗ್ರಹಿಸಬೇಕಿಲ್ಲ ಅದರಾಚೆಗೆ ಅದಕ್ಕೊಂದು ರಾಜಕೀಯ ಆಯಾಮ ಇರುತ್ತದೆ.ಹಾಗೆಯೆ ಜಾತ್ರೆ ಕೂಡ, ಧಾರ್ಮಿಕ ನಾಯಕನ ಶಕ್ತಿಯ ಪ್ರದರ್ಶನದ ಭಾಗವಗುವುದರ ಮೂಲಕ ರಾಜಕೀಯ ಆಯಾಮ ಪಡೆದುಕೊಂಡಿರುತ್ತದೆ.
ಧಾರ್ಮಿಕ ಮತ್ತು ರಾಜಕೀಯ ಶಕ್ತಿಗಳನ್ನು ಪೋಷಿಸುವ ಕೆಲಸ ಸಾಮಾನ್ಯ ಜನರ ಬದುಕಿನ ಭಾಗವಾಗಿತ್ತು.ದೇವಾಲಯಗಳಿಗೆ ನೀಡುತ್ತಿದ್ದ ಬಂಜರು ಭೂಮಿಯನ್ನು ಭಕ್ತರ ಮೂಲಕ ಕೃಷಿ ಭೂಮಿಯನ್ನಾಗಿ ಮಾಡಲಾಗುತ್ತಿತ್ತು.ಈ ಭೂಮಿಯ ಮೇಲೆ ಮತ್ತು ಅದರ ಉತ್ಪನ್ನದ ಮೇಲೆ ರಾಜರು ತೆರಿಗೆ ವಿಧಿಸುತ್ತಿದ್ದರು.ಆ ಮೂಲಕ ತಮ್ಮ ಆದಾಯ ಹೆಚ್ಚಾಗುವಂತೆ ಮಾಡಿಕೊಳ್ಳುತ್ತಿದ್ದರು.
ಹೀಗೆ ರಾಜಕೀಯ ನಾಯಕರು ಕೊಟ್ಟೂರೆಶ್ವರ ಭಕ್ತರನ್ನು ಒಲಿಸಿಕೊಳ್ಳಲು ಯತ್ನಿಸಿರುವುದು ಆಗಿನಿಂದಲೂ ನಡೆದುಕೊಂಡೇ ಬಂದಿದೆ.ಅದು ಈಗಲೂ ನಿಂತಿಲ್ಲ. ಚುನಾವಣೆ ಬಂತೆಂದರೆ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಪಕ್ಷಗಳು ನಮ್ಮೂರ ದೇವಸ್ಥಾನಕ್ಕೆ ಸಾಕಷ್ಟು ಹಣ ದಾನ ನೀಡುತ್ತವೆ. ಊರಿಗೆ ಪ್ರಚಾರಕ್ಕೆ ಬರುವ ಯಾವುದೇ ಪ್ರಮುಖ ಮುಖಂಡರು ದೇವಾಲಯದ ಮುಂದೆ ನಿಂತು ಲಕ್ಷಾಂತರ ರೂಪಾಯಿ ದಾನ ಮಾಡುತ್ತಾರೆ. ಬೀರ್ ಉದ್ಯಮಿ ವಿಜಯ್ ಮಲ್ಯ ಕನ್ನಡವನ್ನು ತೊದಲುತ್ತ ತನ್ನ ಪಕ್ಷದ ಪರವಾಗಿ ಲಕ್ಷ ರೂಪಾಯಿ ದಾನ ಘೋಷಣೆ ಮಾಡಿದ್ದೂ ನನಗಿನ್ನೂ ನೆನಪಿದೆ. ಇನ್ನೇನು ಏಪ್ರಿಲ್-ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ. ಈ ಬಾರಿ ಕೊಟ್ಟೂರು ಜಾತ್ರೆಗೆ ಬರುವ ಸುತ್ತಲಿನ ಭಕ್ತರನ್ನು ಒಲಿಸಿಕೊಳ್ಳಲು ವಿವಿಧ ಪಕ್ಷಗಳು ಮತ್ತೆ ಸರ್ಕಸ್ ಮಾಡಲಿವೆ.ನಮ್ಮೂರ ಜಾತ್ರೆಗೆ ಬಂದರೆ ಇವೆಲ್ಲಾ ನೀವು ನೋಡಬಹುದು. ತಪ್ಪದೆ ಬನ್ನಿ.. ಫೆಬ್ರವರಿ ೧೯, ಮರೀಬೇಡಿ.